ಹೆಲಿಕಾಪ್ಟರ್​ ದುರಂತ: ಸೇನಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್​ ರಾವತ್ ನಿಧನ


 ತಮಿಳುನಾಡಿನ ಕುನೂರ್​​ನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಸೇನಾ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್​ ರಾವತ್  ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ನಡುವಿನ ಹೋರಾಟದಲ್ಲಿ ಇದ್ದ ಬಿಪಿನ್​ ರಾವತ್ ಮರಣವನ್ನು ಭಾರತೀಯ ವಾಯುಸೇನೆ ದೃಢಪಡಿಸಿದೆ. ಟ್ವೀಟ್ ಮಾಡಿರುವ ಇಂಡಿಯನ್ ಏರ್​ಫೋರ್ಸ್​, ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಹೆಲಿಕಾಪ್ಟರ್​​ನಲ್ಲಿದ್ದ ಇತರ ಒಟ್ಟು 14  ಮಂದಿ ಇಂದಿನ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ ಎಂದು ಹೇಳಿದೆ.

 ಸಿಡಿಎಸ್​ ಬಿಪಿನ್​ ರಾವತ್​ ಅವರು ಇಂದು ಬೆಳಗ್ಗೆ 9 ಗಂಟೆಗೆ ದೆಹಲಿಯಿಂದ ತಮ್ಮ ಪತ್ನಿ, ಇನ್ನಿತರ ಸೇನಾ ಅಧಿಕಾರಿಗಳೊಂದಿಗೆ ತಮಿಳುನಾಡಿನ ವೆಲ್ಲಿಂಗ್ಟನ್​ಗೆ ಹೋಗಿದ್ದರು. ಅಂದರೆ ದೆಹಲಿಯಿಂದ ಕೊಯಂಬತ್ತೂರಿನ ಸೂಲೂರ್​ಗೆ ಬಂದು, ಅಲ್ಲಿಂದ ಮಧ್ಯಾಹ್ನ 12.20ಕ್ಕೆ ವೆಲ್ಲಿಂಗ್ಟನ್​ಗೆ ಸೇನಾ ಹೆಲಿಕಾಪ್ಟರ್​ನಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ ಈ ಚಾಪರ್ ಕೂನೂರು ಬಳಿ ಪತನವಾಗಿತ್ತು. ಇದರಲ್ಲಿದ್ದ 14 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಬಿಪಿನ್​ ರಾವತ್ ಪತ್ನಿ ಮೃತಪಟ್ಟಿದ್ದು ಆಗಲೇ ಅಧಿಕೃತವಾಗಿತ್ತು. ಆದರೆ ಬಿಪಿನ್​ ರಾವತ್ ಗೆ ಇನ್ನೂ ಚಿಕಿತ್ಸೆ ನಡೆಯುತ್ತಿದೆ ಎನ್ನಲಾಗಿತ್ತು. ಇದೀಗ ವಾಯುಸೇನೆ ಅವರ ಸಾವನ್ನು ದೃಢಪಡಿಸಿದೆ. ಬಿಪಿನ್​ ರಾವತ್​ ಮೃತದೇಹವನ್ನು ನಾಳೆ ದೆಹಲಿಗೆ ತರಲಾಗುವುದು ಎಂದು ಹೇಳಲಾಗಿದೆ.

ಬಿಪಿನ್ ರಾವತ್​ ಪೂರ್ತಿ ಹೆಸರು ಬಿಪಿನ್​ ಲಕ್ಷ್ಮಣ್​ ಸಿಂಗ್​ ರಾವತ್​. ಇವರಿಗೆ 63 ವರ್ಷ ವಯಸ್ಸಾಗಿತ್ತು. ಮೂಲತಃ ಉತ್ತರಾಖಂಡ್​​ನವಾರಗಿದ್ದು, 2019ರಲ್ಲಿ ಈ ಸಿಡಿಎಸ್​ ಹುದ್ದೆಗೆ ಏರಿದ್ದರು. 2015ರಲ್ಲಿ ನಾಗಾಲ್ಯಾಂಡ್​ ಬಳಿ ನಡೆದಿದ್ದ ಹೆಲಿಕಾಪ್ಟರ್ ಪತನ ದುರಂತದಲ್ಲಿ ಬಿಪಿನ್ ರಾವತ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದರು. ಇಂದು ಬಿಪಿನ್​ ರಾವತ್ ಸಾವಿಗೆ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸೇರಿ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

Post a Comment

0 Comments